ಸೋಮವಾರ, ಡಿಸೆಂಬರ್ 23, 2013

ಕಾಣದ ಕಡಲಿಗೆ ಸೇರಿಹೋದ ಭಾವಕವಿಗೆ ನುಡಿನಮನ:







ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಅನಂತದಲ್ಲಿ ಲೀನರಾಗಿದ್ದಾರೆ. ಆದರೆ... ಅವರು ಕನ್ನಡ ನಾಡಿಗೆ ಕೊಟ್ಟ ಸಾಹಿತ್ಯ ಮತ್ತು ಕವಿತೆಗಳು ಅಜರಾಮರವಾಗಿವೆ. ಅವರ ಕವಿತೆಗಳನ್ನು ಹಾಡಾಗಿ ಬಳಸಿಕೊಂಡ ಸಿನೆಮಾ ರಂಗ ಶ್ರೀಮಂತವಾಗಿದೆ. ಸಿನೆಮಾ ಎನ್ನುವುದೇ ಹಣದ ವ್ಯವಹಾರವಾಗಿರುವಾಗ ತಮ್ಮ ಹಾಡುಗಳನ್ನು ಸಿನೆಮಾಗಳಿಗೆ ಉಚಿತವಾಗಿ ಕೊಟ್ಟ ಜಿ.ಎಸ್.ಎಸ್ ರವರು " ಸಾಹಿತ್ಯವನ್ನು ಹಣಕ್ಕಾಗಿ ಮಾರಿಕೊಳ್ಳುವುದಿಲ್ಲ,  ಅದು ನನ್ನ ಸ್ವಂತ ಖುಷಿಗಾಗಿ ಬರೆದದ್ದು" ಎಂದು ಹೇಳುವ ಮೂಲಕ ತಮ್ಮ ಕಾವ್ಯ ಬದ್ಧತೆಯನ್ನು ತೋರಿದ್ದಾರೆ.

ಸಾಹಿತ್ಯದ ಜೊತೆಗೆ ಸಿನೆಮಾದ ಕುರಿತು ಆಸಕ್ತಿಯನ್ನಿಟ್ಟುಕೊಂಡೇ ಶಿವರುದ್ರಪ್ಪನವರು ಬೆಳೆದರಾದರೂ ಎಂದೂ ಸಿನಮಾದ ಸಂದರ್ಭಕ್ಕೆ ತಕ್ಕಂತೆ ಎಂದೂ ಹಾಡನ್ನು ಬರೆದವರಲ್ಲ.  ಆದರೆ ಸಿನೆಮಾದವರು ಅವರ ಭಾವಗೀತೆಗಳನ್ನು ತಮ್ಮ ದೃಶ್ಯದ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಂಡರು. ಕೇವಲ ನಾಲ್ಕೈದು ಕವಿತೆಗಳನ್ನು ಸಿನೆಮಾದವರು ಹಾಡುಗಳಾಗಿ ಬಳಸಿಕೊಂಡಿದ್ದರೂ ಅವು ಇವತ್ತೂ ಕನ್ನಡಿಗರ ಮನಸ್ಸಿನಲ್ಲಿ ಉಳಿಯುವಂತಹವಾಗಿವೆ.

ಮೊಟ್ಟ ಮೊದಲ ಬಾರಿಗೆ ಜಿ.ಎಸ್.ಎಸ್ ರವರ ಕವಿತೆಯೊಂದು ಸಿನೆಮಾ ಹಾಡಾಗಿದ್ದು 1971ರಲ್ಲಿ ಬಂದ 'ಮುಕ್ತಿ' ಸಿನೆಮಾದಲ್ಲಿ. ಅದು "ಯಾರವರು..... ಯಾರವರು..."  ಎನ್ನುವ ಭಾವಗೀತೆ.  ನಂತರ ಜಿ.ಎಸ್.ಎಸ್ ರವರ ಕವಿತೆಯಲ್ಲಿರುವ ವಿಷಾದ ವಿಡಂಬಣೆಗಳನ್ನು ಗುರುತಿಸಿದ್ದು ಕನ್ನಡದ ಶ್ರೇಷ್ಟ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲರವರು. 1982ರಲ್ಲಿ ಬಿಡುಗಡೆಗೊಂಡ 'ಮಾನಸ ಸರೋವರ' ಸಿನೆಮಾದಲ್ಲಿ ಜಿ.ಎಸ್.ಎಸ್ರವರ ಎರಡು ಕವಿತೆಗಳನ್ನು ಕಣಗಾಲರವರು ಹಾಡಾಗಿ ಬಳಸಿಕೊಂಡರು. ಒಂದು "ಹಾಡು ಹಳೆಯದಾದರೇನು ಭಾವ ನವನವೀನ..."  ಇನ್ನೊಂದು "ವೇದಾಂತಿ ಹೇಳಿದನು ಹೊಣ್ಣೆಲ್ಲಾ ಮಣ್ಣೆಂದು, ಕವಿಯೊಬ್ಬ ಹಾಡಿದರು ಮಣ್ಣೆಲ್ಲಾ ಹೊಣ್ಣೆಂದು.....". ಈ ಎರಡೂ ಹಾಡುಗಳನ್ನು ಸಿನೆಮಾ ದೃಶ್ಯದ ಸಂದರ್ಭಕ್ಕೆ ಸೂಕ್ತವಾಗಿ ಹೊಂದಾಣಿಕೆ ಮಾಡಿದ ಕಣಗಾಲರವರು "ಮಾನಸ ಸರೋವರ" ಸಿನೆಮಾವನ್ನು ಕನ್ನಡಿಗರ ಮನಸ್ಸಿನೊಳಗೆ ಅಚ್ಚಳಿಯದಂತೆ ಕಟ್ಟಿಕೊಟ್ಟರು. ವಿಯಯ್ ಭಾಸ್ಕರರವರು ಈ ಎರಡೂ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು.  ಆ ಸಿನೆಮಾದ ಯಶಸ್ಸಿಗೆ ಕಣಗಾಲರವರ ಪ್ರತಿಭೆ ಹಾಗು ಜಿ.ಎಸ್.ಎಸ್ ರವರ ಭಾವವನ್ನೇ ಕಲಕುವಂತಹ ಹಾಡುಗಳೇ ಕಾರಣವಾಗಿವೆ.  2001 ರಲ್ಲಿ ಬಂದ "ಪ್ಯಾರಿಸ್ ಪ್ರಣಯ" ಚಲನಚಿತ್ರದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ರವರು ಜಿ.ಎಸ್.ಎಸ್ ರವರ "ಎದೆ ತುಂಬಿ ಹಾಡಿದೆನು ಅಂದು ನಾನು..." ಎನ್ನುವ ಸುಪ್ರಸಿದ್ದ ಭಾವಗೀತೆಯನ್ನು ಸಿನೆಮಾ ಹಾಡಾಗಿ ಬಳಸಿಕೊಂಡು ಚೆಂದದ ಸಿನೆಮಾ ಕಟ್ಟಿಕೊಟ್ಟರು. ಇತ್ತೀಚೆಗೆ ಬಂದ "ಮೈನಾ" ಸಿನೆಮಾದಲ್ಲಿ "ಕಾಣದ ಕಡಲಿಗೆ ಹಂಬಲಿಸಿದೆ ಮನ..." ಎನ್ನುವ ಜಿ.ಎಸ್.ಎಸ್ರವರ  ಮತ್ತೊಂದು ಜನಪ್ರೀಯ ಭಾವಗೀತೆಯನ್ನು ಬಳಸಿಕೊಳ್ಳಲಾಗಿದೆ.   

ಇಲ್ಲಿ ಒಂದು ವಿಶೇಷತೆಯನ್ನು ಗಮನಿಸಬೇಕು. ಸಾಹಿತಿ  ಕವಿಯೊಬ್ಬರು ಬರೆದ ಹಾಡುಗಳನ್ನು ಸಿನೆಮಾಗೆ ಅಳವಡಿಸಿ ಆಯಾ ಹಾಡಿನ ಜೊತೆಗೆ ಬರೆದವರಿಗೂ ಒಂದು ಐಡೆಂಟಿಟಿಯನ್ನು ಚಲನಚಿತ್ರರಂಗ ತಂದುಕೊಡುತ್ತದೆ. ಆದರೆ   ಜಿ.ಎಸ್.ಎಸ್ರವರ  ಕವಿತೆಗಳನ್ನು ಸಿನೆಮಾ ಹಾಡಾಗಿ ಬಳಿಸಿಕೊಳ್ಳುವ ಮೂಲಕ ಚಲಚಚಿತ್ರರಂಗವು ತನ್ನ ಐಡೆಂಟಿಟಿಯನ್ನು ಗಟ್ಟಿಗೊಳಿಸಿಕೊಂಡಿತು. ಮೀಟರ್ ಗೆ ಹಾಡುಗಳನ್ನು ಹೊಂದಾಣಿಸಿ ಬರೆಯುವಂತಹ, ಟ್ಯೂನ್ ಗಳೇ  ಹಾಡಿನ ಸಾಹಿತ್ಯವನ್ನು ನಿರ್ಧರಿಸುವಂತಹ ಪ್ರಸ್ತುತ ಸಿನೆಮಾ ಹಾಡಿನ ಸಾಹಿತ್ಯವಿರೋಧಿ ಟ್ರೆಂಡ್ ಗಳು ಚಲಚಚಿತ್ರವನ್ನು ಆಳುತ್ತಿವೆ. ಆದರೆ ಸಾಹಿತ್ಯದ ಗೋರಿಯ ಮೇಲೆ ಸಂಗೀತವನ್ನು ವೈಭವೀಕರಿಸುವ ಹಾಡುಗಳಿಗೆ, ಗಧ್ಯವನ್ನೇ ಪದ್ಯವಾಗಿಸುವ ಗಪದ್ಯ ಶೈಲಿಯ ಹಾಡುಗಳಿಗೆ ಆಯುಷ್ಯ ಬಲು ಕಡಿಮೆ. ಭಾವತೀವ್ರತೆಯನ್ನು, ಕೇಳುಗರ ಮನಸ್ಸಿನಲ್ಲಿ ಆರ್ಧತೆಯನ್ನು ಹುಟ್ಟಿಸದ ಹಾಡುಗಳು ಕಾಲನ ಇತಿಹಾಸದಲ್ಲಿ ಗಟ್ಟಿಯಾಗಿ ನಿಲ್ಲಲಾರವು. ಶಿವರುದ್ರಪ್ಪನವರಂತೆ ಭಾವಪೂರ್ವಕವಾಗಿ ಬರೆದ ಹಾಡುಗಳು ಯಾವತ್ತೂ ಕೇಳುಗರ ಮನಸ್ಸಿನೊಳಗೆ  ನೆಲೆಸುವಂತಹವು. ಆದ್ದರಿಂದಲೇ ಇವತ್ತೂ ಸಿನೆಮಾ ಸಾಹಿತಿಗಳು ಸಿನೆಮಾಕ್ಕಾಗಿಯೇ ಬರೆಯುವ  ಹಾಡುಗಳಿಗಿಂತ ಕುವೆಂಪು, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ... ರಂತವರ ಕವಿತೆಗಳು, ಭಾವಗೀತೆಗಳು ಸಿನೆಮಾ ಹಾಡುಗಳಾಗಿ ಜನರ ಹೃದಯಕ್ಕೆ ಹತ್ತಿರವಾಗಿ ಸಾರ್ವಕಾಲಿಕ ದೃಶ್ಯ ಮತ್ತು ಶ್ರವ್ಯ ಗೀತೆಗಳಾಗಿ ಅಜರಾಮರವಾಗಿವೆ.  ಭಾವಕಾವ್ಯ ದಿಗ್ಗಜ ರಾಷ್ಟ್ರಕವಿ ಶಿವರುದ್ರಪ್ಪನವರಿಗೆ ಸಿನೆಮಾ ರಂಗದ ನುಡಿನಮನ.